ಇತ್ತೀಚಿಗೆ ಕನ್ನಡದಲ್ಲಿ ಹೆಚ್ಚು ಸಂಖ್ಯೆಯ ಹಾರರ್ ಸಿನಿಮಾಗಳು ಬರುತ್ತಿವೆ. ಈಗ ಅದೇ ಸಾಲಿಗೆ ಲೀಲ ಸೇರ್ಪಡೆಯಾಗಿದೆ. ನಿರ್ದೇಶಕ, ನಿರ್ಮಾಪಕ, ನಾಯಕ ಎಲ್ಲರೂ ಮುಳಬಾಗಿಲಿನವರು. ಹೀಗಾಗಿ ಅಲ್ಲಿಯೇ ಮಹೂರ್ತ ಆಚರಿಸಿಕೊಂಡು, ಸುತ್ತಮುತ್ತ ಚಿತ್ರೀಕರಣ ನಡೆಸಿತ್ತು. ಈಗ ಈ ಚಿತ್ರದ ಹಾಡುಗಳ ಸಿಡಿ ಕೂಡಾ ಮುಳಬಾಗಿಲಿನಲ್ಲೇ ಬಿಡುಗಡೆಯಾಗಿದೆ. ಗಡಿನಾಡ ಡಿವಿಜಿ ರಂಗಮಂದಿರದಲ್ಲಿ ಜನಸಾಗರದ ಸಮ್ಮುಖದಲ್ಲಿ ಈ ಚಿತ್ರದ ಗೀತೆಗಳು ಅನಾವರಣಗೊಂಡವು.
ರಚನೆ, ನಿರ್ದೇಶನ ಮಾಡಿರುವ ಎಲ್.ಎಂ.ಗೌಡ ಹೇಳುವಂತೆ “ಶೀರ್ಷಿಕೆ ನಾಯಕಿಯಾಗಿರುವುದಿಲ್ಲ. ಅದು ಮಗುವಿನ ಹೆಸರು. ಮೂವರು ಖಳನಾಯಕರು ತಮ್ಮ ವ್ಯಾಪಾರ ವೃದ್ಧಿಯಾಗಲು ಮಗು ಬಲಿಕೊಡಬೇಕೆಂದು ಜ್ಯೋತಿಷಿ ಹೇಳಿದಂತೆ ಕೆಲಸಗಾರನ ಮಗಳನ್ನು ಬಲಿಕೊಟ್ಟಿರುತ್ತಾರೆ. ಹೀಗೆ ಬಲಿಯಾದ ಲೀಲಾ ಆತ್ಮ ನಾಯಕನ ದೇಹಕ್ಕೆ ಆವರಿಸಿಕೊಂಡು ಯಾವ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಾಳೆ ಅನ್ನೋದು ಈ ಚಿತ್ರದ ಕೊನೆಯ ವರೆಗೂ ಉಳಿಯುವ ಕುತೂಹಲ. ಮುಳಬಾಗಿಲು ಡಿವೈಎಸ್ಪಿ ಪ್ರಭಾಕರ್ ಬಾಯರಿ, ತಹಶೀಲ್ದಾರ್ ಪ್ರವೀಣ್, ನಟ ಕೊತ್ತನೂರು ವೆಂಕಟರಮಣ ಹಾಡಿನ ಸಿಡಿಯನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.
ರಂಗಾಯಣದಲ್ಲಿ ತರಬೇತಿ ಪಡೆದು ಬಂದು ನಾಯಕನಾಗಿರುವ ರೋಹಿತ್ ಮತ್ತು ನಾಯಕಿ ಬೆಂಗಳೂರಿನ ಅಲ್ಮಾಸ್ ಇಬ್ಬರಿಗೂ ಹೊಸ ಅನುಭವ. ಇನ್ನುಳಿದ ಪಾತ್ರವರ್ಗದಲ್ಲಿ ಶೋಭರಾಜ್, ಆದಿ ಲೋಕೇಶ್, ಸಂತೋಷ್ ಇವರೊಂದಿಗೆ ದಶಾವರ ಚಂದ್ರು, ಶಂಕರ್ಭಟ್ ಮತ್ತು ಮುಳಬಾಗಿಲಿನ ಯುವಕರು ನಟಿಸಿದ್ದಾರೆ. ನಾಲ್ಕು ಹಾಡುಗಳಿಗೆ ಶ್ರೀ ಹರ್ಷ ಸಂಗೀತ ಸಂಯೋಜನೆ ಮಡಿದ್ದಾರೆ. ಸಾಹಸ ಥ್ರಿಲ್ಲರ್ಮಂಜು, ಸಾಹಿತ್ಯ ಶ್ರೀತೇಜ್, ಛಾಯಗ್ರಹಣ ರಾಜು ಶಿರಾ, ಸಂಕಲನ ಕುಮಾರ್ ನಿರ್ವಹಿಸಿದ್ದಾರೆ.
ನಿರ್ಮಾಪಕ ಸರ್ದಾರ್ ತಮ್ಮ ಪುತ್ರನನ್ನು ನಾಯಕನನ್ನಾಗಿಸುವ ಸಲುವಾಗಿ ಗೆಳಯ ಷಫಿ ಜೊತೆ ಸೇರಿಕೊಂಡು ಹಣ ಹೂಡಿದ್ದಾರೆ. ಬೀರಪ್ಪ ಸಹ ನಿರ್ಮಾಪಕರು. ಗಡಿನಾಡಿನಲ್ಲಿ ಕನ್ನಡ ಚಿತ್ರದ ಕಾರ್ಯಕ್ರಮ ನಡೆದಿರುವುದರಿಂದ ಸ್ಥಳೀಯರು ಹೆಚ್ಚು ಸಂತಸಗೊಂಡಿದ್ದಾರೆ. ಇದಕ್ಕೂ ಮುನ್ನ ಟ್ರೈಲರ್, ೨ ಹಾಡುಗಳನ್ನು ತೋರಿಸಲಾಯಿತು. ಲಹರಿ ಸಂಸ್ಥೆ ಹಾಡುಗಳನ್ನು ಹೊರತಂದಿದೆ. ಚಿತ್ರವು ಇದೇ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.